Mon Sep 30 13:21:06 UTC 2024: ## ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಆಂತರಿಕ ವಿಚಾರಣೆ ಕೋರಿದ್ದಕ್ಕೆ ತೀವ್ರ ಆಕ್ರೋಶ

ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಆಂತರಿಕ ವಿಚಾರಣೆ ನಡೆಸುವಂತೆ ಕೋರಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪುಣೆ ಮೂಲದ ಅರ್ಜಿದಾರರು ಗೊಗೊಯಿ ಅವರನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ಪಿಐಎಲ್) ಪ್ರತಿವಾದಿಯನ್ನಾಗಿಸಿ, ಅವರ ವಿರುದ್ಧ ಸೇವಾ ತಕರಾರಿಗೆ ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಿದ್ದಕ್ಕಾಗಿ ಆಂತರಿಕ ವಿಚಾರಣೆಗೆ ಆದೇಶಿಸುವಂತೆ ಕೋರಿದ್ದರು.

“ನ್ಯಾಯಮೂರ್ತಿಯೊಬ್ಬರನ್ನು ಪ್ರತಿವಾದಿಯನ್ನಾಗಿಸಿ ನೀವು ಪಿಐಎಲ್ ಸಲ್ಲಿಸಿದ್ದು ಹೇಗೆ? ತುಸುವಾದರೂ ಘನತೆ ಇರಬೇಕು. ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ಆಗಬೇಕು ಎಂದು ಹೀಗೇ ಸುಮ್ಮನೆ ಹೇಳಲು ಅವಕಾಶವಿಲ್ಲ. ಗೊಗೊಯಿ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದವರು,” ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿದಾರರಿಗೆ ಹೇಳಿದೆ.

“ಗೊಗೊಯಿ ಅವರು ನಿವೃತ್ತ ಸಿಜೆಐ. ನ್ಯಾಯಪೀಠದ ಎದುರು ನಿಮಗೆ ಜಯ ಸಿಗಲಿಲ್ಲ ಎಂಬ ಕಾರಣಕ್ಕೆ ನ್ಯಾಯಮೂರ್ತಿಯೊಬ್ಬರ ವಿರುದ್ಧ ಆಂತರಿಕ ವಿಚಾರಣೆ ನಡೆಯಬೇಕು ಎಂದು ಹೇಳಲು ಅವಕಾಶ ಇಲ್ಲ. ಇದನ್ನು ನಾವು ಸಹಿಸುವುದಿಲ್ಲ,” ಎಂದು ಪೀಠವು ಹೇಳಿದೆ.

ಅರ್ಜಿದಾರರು ತಮ್ಮನ್ನು ಸೇವೆಯಿಂದ ತೆಗೆದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ಪೀಠವು ಈ ಹಿಂದೆ ವಜಾಗೊಳಿಸಿತ್ತು. ಇದಾದ ನಂತರ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದರು. ಗೊಗೊಯಿ ಅವರು ಈಗ ರಾಜ್ಯಸಭಾ ಸದಸ್ಯ.

Read More